ಎರಡು ತಲೆಮಾರುಗಳ ಸ್ಥಿತ್ಯಂತರದ ‘ಹರಿವ ನಿಲ್ಲಿಸದಿರು ತಾಯಿ’ ಸರಸ್ವತಿ ನದಿ ಮೂಲದ ಗೌಡ ಸಾರಸ್ವತ ಸಮಾಜವು ೧೨ ವರ್ಷಗಳ ಭೀಕರ ಬರಗಾಲದ ಬಳಿಕ ಸರಸ್ವತಿಯ ಒಡಲು ಖಾಲಿಯಾದಾಗ ದಕ್ಷಿಣದತ್ತ ವಲಸೆ ಬರುವುದು, ಆಗ ಪೋರ್ತುಗೀಸರ ಆಡಳಿತವಿದ್ದುದರಿಂದ ಅವರಿಂದ ದಾಳಿ ತಪ್ಪಿಸಿಕೊಳ್ಳಲು, ಧರ್ಮ ಭ್ರಷ್ಟರಾಗದಿರಲು, ಸಮಾಜದ ಇತಿಹಾಸ ಕಾಪಾಡಲು, ಅವರು ನಡೆಸಿದ ಹೋರಾಟ, ವಲಸೆ ಹೊರಟ ಸಹಸ್ರಾರು ಕುಟುಂಬಗಳು ಪಶ್ಚಿಮ ಕರಾವಳಿಯ ಉದ್ದಕ್ಕೂ ನೆಲೆಸುವುದು, ಹೊಸ ಜೀವನಕ್ಕಾಗಿ ಸಂಘರ್ಷ ಆರಂಭಿಸುವುದು, ಪ್ರಸ್ತುತ ಈ ಸಮಾಜವು ಮರೆಯಾಗುತ್ತಿರುವ ಸಂಪ್ರದಾಯ, ಸಂಸ್ಕೃತಿ ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು ‘ಹರಿವ ನಿಲ್ಲಿಸದಿರು ತಾಯಿ’ ಕಾದಂಬರಿಯ ಸಾರಾಂಶ. ಲೇಖಕ ಮನೋಹರ್ ಪೈ ಅವರ ಈ ಕೃತಿ ಗೌಡ ಸಾರಸ್ವತ ಸಮಾಜದ ಮೇಲೆ ಕ್ಷಕಿರಣ ಬೀರುವುದಲ್ಲದೆ, ಅವರ ಹಬ್ಬ- ಹರಿದಿನಗಳ ಆಚರಣೆ, ಆಹಾರ ಪದ್ದತಿ, ಸಂಪ್ರದಾಯವನ್ನು ಕಟ್ಟಿಕೊಡುವ ಮೂಲಕ ಒಂದು ರೀತಿಯಲ್ಲಿ ಐತಿಹಾಸಿಕ, ಸಾಂಸ್ಕೃತಿಕ ವಿಷಯವನ್ನೂ ಈ ಕಾದಂಬರಿ ತೆರೆದಿಟ್ಟಿದೆ. ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಮತ್ತು ಯುವಜನರ ಮನಃಸ್ಥಿತಿಯನ್ನು ಮನೋಜ್ಞವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಇದು ಇಂದು ಬಹುತೇಕ ಎಲ್ಲ ಸಮಾಜಗಳ ಸಮಸ್ಯೆಯೂ ಹೌದು. ವಿವಾಹ ಬಂಧನದ ಬಗ್ಗೆ ನಿ...