Posts

Showing posts from March, 2026
Image
 ಅಮ್ಮನ ಮಹತ್ವ ಬಣ್ಣಿಸುವ  ‘ಅಮ್ಮ ಮರೆಯಲಾಗದ ಅನುಭೂತಿ’  ‘ದೀವಾರಾ’ ಎಂಬ ಹಿಂದಿ ಸಿನಿಮಾದಲ್ಲಿ ಒಂದು ಸಂಭಾಷಣೆ ಇದೆ -ನನ್ನ ಬಳಿ ಆಸ್ತಿ ಇದೆ, ಹಣವಿದೆ, ಕಾರಿದೆ, ಬಂಗಲೆ ಇದೆ, ನಿನ್ನ ಹತ್ತಿರ ಏನಿದೆ ಎಂದು ಸಹೋದರ ಶಶಿಕಪೂರ್ ಅಮಿತಾ ಬಚ್ಚನ್‌ನಲ್ಲಿ ಕೇಳುತ್ತಾನೆ . ಆಗ ಆತ ಹೇಳುತ್ತಾನೆ-  ನನ್ನ ಬಳಿ ಅಮ್ಮ ಇದ್ದಾಳೆ. ಇನ್ನೊಂದು ಕವಿತೆಯ ಸಾಲು ಹೀಗಿದೆ- ಕೋಟಿ ದೇವರೆಲ್ಲ ಕೂಡಿ ನಿಂತರೇನು, ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು? ಇನ್ನೊಂದು ಚಲನಚಿತ್ರಗೀತೆ ಹೀಗಿದೆ- ಅಮ್ಮಾ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು..... ಈ ಸಾಲುಗಳು ಅಮ್ಮನ  ಪರಿಚಯ ಮಾಡಿಕೊಡಲು ಸಾಕು.    ಕಾರ್ಕಳದ ನಿವೃತ್ತ ಶಿಕ್ಷಕಿ ನಿವೃತ್ತ ಶಿಕ್ಷಕಿ ಅನುಪಮಾ ಚಿಪ್ಳೂಣಕರ್ ಅವರ ‘ಅಮ್ಮ ಮರೆಯಲಾಗದ ಅನುಭೂತಿ’  ಎನ್ನುವ ಈ ಕೃತಿ ಓದುವಾಗ ಮೇಲಿನ ಸಾಲುಗಳು ನೆನಪಾಗುತ್ತವೆ. ಜೊತೆಗೆ ನಮ್ಮ ಅಮ್ಮಂದಿರು ಈ ಕೃತಿಯನ್ನು ಓದುವಾಗ ನಮ್ಮೆದುರು ಪ್ರತ್ಯಕ್ಷರಾಗುತ್ತಾರೆ. ಅಮ್ಮ ನಮ್ಮ ಎದೆಯಾಳದಲ್ಲಿ ಅವಿತಿರುವವಳು.  ಲೇಖಕಿ ಅನುಪಮಾ ನಮಗೆಲ್ಲಾ ಈ ಕೃತಿಯ ಮೂಲಕ ಅಮ್ಮನ ನೆನಪಿನ ಸವಿ, ಅವಳ ವಿರಾಟ್ ರೂಪ, ಅವಳ ದೈವತ್ವದ ಶಕ್ತಿ, ಅವಳು ಕಷ್ಟಪಟ್ಟು ನಮ್ಮನ್ನು ಬೆಳೆಸಿದ  ರೀತಿ, ಹೃದಯ ವೈಶಾಲ್ಯತೆ, ನಿಷ್ಕಲ್ಮಶ ಪ್ರೇಮವನ್ನು  ೧೩ ಕಿರು ಲೇಖನಗಳ ಮೂಲಕ ತೋರಿಸಿದ್ದಾರೆ.   ಅಮ್ಮನ ಪಾತ್ರವನ್ನ...
Image
 ನೆಮ್ಮದಿಯ ಬದುಕಿಗೆ   ಚಿಂತೆ ಬಿಡಿ ಚಿಲ್ ಮಾಡಿ  ‘ಚಿಂತೆ ಬಿಡಿ ಚಿಲ್ ಮಾಡಿ’  ಇದು ಸ್ಫೂರ್ತಿದಾಯಕ ಬರಹಗಳ ಸರಳ ಕೃತಿ. ತೀರ್ಥಹಳ್ಳಿ  ಸಮೀಪದ  ಕೋಣಂದೂರಿನವರದಾದ ಶ್ವೇತಾ ಭಿಡೆ  ಅವರ ಮೊದಲ ಕೃತಿ. ಅತ್ಯಂತ  ಅವಶ್ಯ ವಿಷಯಗಳನ್ನು ಒಳಗೊಂಡ ಈ ಕೃತಿಯು ನಮ್ಮ ಜೀವನ ಪದ್ಧತಿಯನ್ನು ಮತ್ತು ಮನೋಭಾವವನ್ನು ಬದಲಾಯಿಸಿಕೊಳ್ಳಬಹುದಾದ ವಿಷಯಗಳನ್ನು ಹೊಂದಿದೆ. ಇಲ್ಲಿ ಅಳವಡಿಸಿಕೊಳ್ಳಬಹುದಾದ, ಚಿಂತನೆಗೆ ಹಚ್ಚಬಹುದಾದ ಸಾಲುಗಳಿವೆ. ನಮ್ಮನ್ನೇ ನಾವು ನೋಡಿಕೊಂಡು, ಕೇಳಿಕೊಳ್ಳುವ ಅನೇಕ ಪ್ರಶ್ನೆಗಳಿಗೆ, ಬೇರೆ ಹೊಳಹುಗಳಿಗೆ ಅತ್ಯಂತ ಸರಳ  ಉತ್ತರವಿದೆ.  ‘ನೀನೇನಾಗಬೇಕು, ಅದನ್ನು  ನಿರ್ಧರಿಸುವುದು ನಿನ್ನ ಕೈಲಿದೆ. ಎಲ್ಲವನ್ನೂ ನಿಧಾನಕ್ಕೆ ಕಲಿ’ ಎಂಬ ಮಾತಿದೆ. ಈ ಬದುಕು ನೋವು, ನಲಿವು, ವಿಸ್ಮಯ, ಹತಾಶೆ, ಸಂಭ್ರಮ, ಸಂಕಟಗಳ ಗೂಡು. ಜಗತ್ತೆಂಬ ಮಾರುಕಟ್ಟೆಯೊಳಗೆ ಖಾಲಿ ಕೈಚೀಲ ಹಿಡಿದುಕೊಂಡು ಹೊರಟಾಗ ಯಾವುದು ನಮಗೆ ಬೇಕು, ಎಷ್ಟು ಬೇಕು ಎಂದರಿತು ಖರೀದಿಸುವ ವಿಚಾರ ನಮಗೆ ಗೊತ್ತಿರಬೇಕು.  ನೋವು, ಸಂಕಟ, ದುಃಖ ಬಿಟ್ಟು ಕೇವಲ ಸಂತಸ, ನೆಮ್ಮದಿಯನ್ನಷ್ಟೇ ತರಲಾಗುವುದಿಲ್ಲ.  ಆದರೆ ಅವನ್ನೆಲ್ಲ ಹೇಗೆ ದೂರೀಕರಿಸಿ ನೆಮ್ಮದಿಯ ಪಾಲನ್ನು ಹೆಚ್ಚಾಗಿ ತರಬೇಕೆನ್ನುವುದು ಗೊತ್ತಿರಬೇಕು. ಇದರ ಮೇಲೆ ನಮ್ಮ ಸಂತೋಷ ಅಡಗಿರುತ್ತದೆ.   ಚಿಂತೆ, ನೋವು ಎಲ್ಲರಿಗೂ ಇರುತ್ತದೆ. ಅದನ್ನ...
Image
    ನೆನಪುಗಳ ಉಯ್ಯಾಲೆಯ  ‘ಬೊಗಸೆಗಿಷ್ಟು ಪಾರಿಜಾತ’ ಲೇಖಕಿ ಎಸ್ ಪಿ ವಿಜಯಲಕ್ಷ್ಮಿ ಅವರ ಅನುಭವಗಳ ಲಹರಿಯ ಕೃತಿ ‘ಬೊಗಸೆಗಿಷ್ಟು ಪಾರಿಜಾತ’.  ಇದು ಬಿಡಿ ಬರಹಗಳ ಸಂಗ್ರಹದ ಸಂಕಲನ. ಲೇಖಕಿ ಮೂಲತಃ  ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರದವರಾಗಿದ್ದು ತಮ್ಮ ಬಾಲ್ಯದ ಜೀವನವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಜನಜೀವನ, ರೀತಿ- ನೀತಿ, ಸಂಪ್ರದಾಯ, ಪದ್ಧತಿ, ಧಾರ್ಮಿಕ ಆಚರಣೆ, ವೈವಿಧ್ಯಮಯ ತಿಂಡಿ- ತಿನಿಸು, ಊಟ ಮುಂತಾದವುಗಳನ್ನು  ಮನೋಹರವಾಗಿ  ಚಿತ್ರಿಸಿದ್ದಾರೆ.  ಜೊತೆಗೆ ದೆಹಲಿ ಮತ್ತು ಜರ್ಮನಿಗೆ ತಾವು ಹಲವು ಬಾರಿ ಭೇಟಿ ಕೊಟ್ಟಿದ್ದನ್ನು, ಅಲ್ಲಿನ ನೆನಪುಗಳ ಸಂಗಡ ನಮಗೆ ಉಣಬಡಿಸಿದ್ದಾರೆ.  ಕೃತಿಯಲ್ಲಿ   ವಾಸ್ತವ, ಅನುಭವ, ಲಹರಿ, ತಮಾಷೆ, ಒಂದಷ್ಟು ಮುದವಿದೆ. ವಿವಿಧ ಜಾತಿಯ ಹೂಗಳನ್ನು ಸೇರಿಸಿ ಒಂದು ಸುಂದರಮಾಲೆಯನ್ನು ತಯಾರಿಸಿದಂತೆ ವಿವಿಧ ಅನುಭವಗಳನ್ನು   ಮಿಳಿತಗೊಳಿಸಿದ ಬರಹಗಳು ಇವು. ವಸ್ತುಗಳು, ಭಾವನೆಗಳು ಇದರಲ್ಲಿವೆ. ತೂಗುಮಂಚದಲ್ಲಿ ತಂಗಾಳಿ ಸುಳಿದಂತೆ ಮೆಲ್ಲಗೆ ತೂಗುವಂತಹ ಬರಹಗಳು ಇವು. ಗಂಭೀರ ವಿಷಯ ಇಲ್ಲವಾದರೂ ಟೈಂಪಾಸ್ ಕಡ್ಲೆಕಾಯಿಯಂತೆ ಬಾಯಾಡಿಸಿ, ಅಲ್ಲಲ್ಲಿ ಕಣ್ಣಾಡಿಸಿ, ಸವಿಯಬಹುದು ಎನ್ನುವುದನ್ನು ಸ್ವತಃ ಲೇಖಕಿಯೇ ಇಲ್ಲಿ ಹೇಳುತ್ತಾರೆ.  ಹುಟ್ಟೂರಿನ ಚಿತ್ರಣವನ್ನು ಕಟ್ಟಿಕೊಡುತ್ತಾ,  ಬಾಲ್ಯದ...
Image
 ಮಾನವೀಯ ಮೌಲ್ಯ  ಅರಳಿಸುವ  ‘ಭ್ರೂಣ’  ‘ಭ್ರೂಣ’  ಇದು  ಕಲಬುರಗಿಯ ಬರಹಗಾರ್ತಿ, ಸಂಶೋಧಕಿ ಡಾ. ಶ್ರೀದೇವಿ  ರಾಠೋಡ್ ರಚಿತ ಕಾದಂಬರಿ. ಇದು  ಮಾನವತೆಯ ಮೌಲ್ಯಗಳನ್ನು ಅರಳಿಸಿಕೊಡುತ್ತಾ, ಸಾರ್ವಕಾಲಿಕ ಸತ್ಯದ ನೆಲೆಯ ಅಂತರಂಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರೀತಿಯಲ್ಲಿ ನಿಷ್ಠೆ, ಪರಮಾದರ, ಚಾರಿತ್ರ್ಯ ಶುದ್ಧತೆ ಇದ್ದಾಗ ಸಾಕ್ಷಾತ್ಕಾರವಾಗುತ್ತದೆ. ಆದರೆ ಅದು ಸ್ವಾಭಾವಿಕತೆಯನ್ನು ಅರ್ಥಮಾಡಿಕೊಳ್ಳದ ನಿಸರ್ಗದ ಪವಿತ್ರ ತುಡಿತಗಳನ್ನು ಅನುಭವಿಸದೆ ಗೊಡ್ಡು ಆಚಾರ -ವಿಚಾರಗಳಿಗೆ ಮಾರುಹೋದಾಗ,  ಅದನ್ನೇ ಆಚಾರವೆಂದು ನಂಬಿದಾಗ ಬಹಳಷ್ಟು ಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದನ್ನು ತೋರಿಸಿಕೊಡುತ್ತದೆ.  ಕಂದಾಚಾರಗಳನ್ನು ತೊಡೆದುಹಾಕಿ ಮೌಲ್ಯಗಳ, ತ್ಯಾಗದ ಮೂಲಕ ಬದುಕಿನ ನಿರಭ್ರತೆಯಲ್ಲಿ  ನೋಡಿದಾಗ ಸುಂದರವಾದ, ಸಾರವಾದ,  ಸಮರಸದ ಜೀವನ ಪರಿಶುದ್ಧ ಎನ್ನುವುದನ್ನು ತೋರಿಸಿಕೊಡುತ್ತದೆ. ಪ್ರೀತಿಯ ಶಕ್ತಿ, ಆಯಾ ಪಾತ್ರಗಳಲ್ಲಿರುವ ಸ್ವಾರ್ಥತೆ, ತ್ಯಾಗ ಬದುಕಿನ ಚೈತನ್ಯವು ನಿರಂತರ ಚಿಲುಮೆಯಾಗಲು ಕಾರಣ  ಎನ್ನುವುದನ್ನು ಈ ಕಥೆ ಕಟ್ಟಿಕೊಡುತ್ತದೆ. ಪ್ರೀತಿ ಸ್ವೇಚ್ಛಾರವಾಗದೆ ಎಲ್ಲರಿಗೂ ಸಹ್ಯವಾಗಿ ಪವಿತ್ರತೆಯಿಂದ ಇಲ್ಲಿ ಮೆರೆದಿರುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.   ಪ್ರಸ್ತುತ ಕೃತಿಯಲ್ಲಿ ವೆಂಕಿ ಮತ್ತು ಜಾನು ನಾಯಕ ನಾಯಕಿಯರು. ಈ ಇಬ್ಬರ ನಾಯಕತ್ವದ...
Image
 ನಿಷ್ಕಳಂಕ ಪ್ರೀತಿ, ವೇಶ್ಯೆಯರ ಬದುಕಿನ  ‘ಪ್ರಣಯ ಹಂಪಿ’  ೫ ದಿನ ಹಿಂದೆಯಷ್ಟೇ ಲೋಕಾರ್ಪಣೆಗೊಂಡ ‘ಪ್ರಣಯ  ಹಂಪಿ’ ಇದು ಸಾಹಿತಿ ಕುಂ. ವೀರಭದ್ರಪ್ಪ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಕಾದಂಬರಿ.  ಪ್ರಮುಖವಾಗಿ ಇದರಲ್ಲಿ ಎರಡು ಕಥೆಗಳನ್ನು ಕಾಣಬಹುದು. ಒಂದು ವಿಜಯನಗರದ ಅರಸ ಕೃಷ್ಣದೇವರಾಯನ ಅಳಿಯನಾದ ರಾಮರಾಯನ ಅಂಗರಕ್ಷಕನ- ಅಲ್ಲಿನ ಕಲಾವಿದೆಯ ಮಧ್ಯೆಯ ಪರಿಶುದ್ಧವಾದ ಪ್ರೀತಿ, ಪ್ರೇಮವಾದರೆ, ಇನ್ನೊಂದು ಅಲ್ಲಿನ ವೇಶ್ಯೆಯರ ದುರಂತಮಯ ಬದುಕು. ಅತ್ಯಂತ ಸುಂದರವಾಗಿ ಇವೆರಡನ್ನೂ ಲೇಖಕರು  ಕಟ್ಟಿಕೊಟ್ಟಿದ್ದಾರೆ. ಪ್ರೀತಿ, ಪ್ರೇಮಕ್ಕಿಂತ ಮಿಗಿಲಾದ ಧರ್ಮ ಇಲ್ಲ. ಎಲ್ಲರೂ ಸಮಾನರು. ಯುದ್ಧದಲ್ಲಿ ರಾಜ್ಯಗಳು ಸೋಲಬಹುದು. ಆದರೆ ಬದುಕಲ್ಲಿ ಪ್ರೇಮ ಸೋಲುವುದಿಲ್ಲ  ಎಂಬ ಆಂಶವನ್ನು ಈ ಕಾದಂಬರಿ ಸಾರುತ್ತದೆ. ಜೊತೆಗೆ ಯಾರಲ್ಲಿ  ನಿಸ್ವಾರ್ಥ, ನಿಷ್ಕಳಂಕ ಪ್ರೀತಿ ಇರುತ್ತದೆಯೋ ಅದು ಯುಗಗಳೇ ಕಳೆದರೂ ಶಾಶ್ವತ,  ಬೆಲೆಕಟ್ಟಲಾಗದ್ದು ಎನ್ನುವುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ.  ವೇಶ್ಯೆಯರ ಬದುಕು ಎಂದರೆ ಕೇವಲ ಮೈಮಾರಿ ಜೀವಿಸುವುದು ಎಂದಷ್ಟೇ ತಿಳಿದಿರುವ ನಾವು, ಅರಮನೆಯಲ್ಲಿರುವ, ಅದರಲ್ಲೂ ಯುದ್ಧ್ದಕಾಲದಲ್ಲಿ  ಲಕ್ಷಾಂತರ ಸೈನಿಕರ ಕಾಮದಾಹವನ್ನು ದಿನವಿಡೀ ತಣಿಸುತ್ತ, ವಿವಿಧ ರೋಗರುಜಿನುಗಳಿಂದ ಬಳಲುತ್ತ, ಸೂಕ್ತ ಚಿಕಿತ್ಸೆ ಇಲ್ಲದೆ ಬಳಲಿ, ಯಾರೂ ಇಲ್ಲದೆ ಸಾಯುವುದರ ಬಗ್ಗೆ ...
Image
    ಬೇಸ್ತುಬಿದ್ದು ಹಾಸ್ಯಾಸ್ಪದವಾದ  ಪ್ರಿನ್ಸಿಪಾಲ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’  ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’   ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’  ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಅವರ  ಕಾದಂಬರಿ. ಪ್ರೀತಿಯ ವಿಚಾರದಲ್ಲಿ ವಿದ್ಯಾರ್ಥಿನಿಯೊಬ್ಬಳಿಂದ ಬೇಸ್ತುಬಿದ್ದು ಹಾಸ್ಯಾಸ್ಪದವಾದ  ಪ್ರಿನ್ಸಿಪಾಲರ ಕಥೆಯಿಂದ ಕೂಡಿದೆ. ತನ್ನ ಆರೋಪಿತ ವ್ಯಕ್ತಿತ್ವವನ್ನು ಕಳಚಿಹಾಕಿ ಜೀವನಕ್ಕೆ ತಾನೇ ನೇರವಾಗಿ ಮುಖಾಮುಖಿಯಾಗಿ ತನ್ನ ನಿಜವನ್ನು ಶೋಧಿಸಿಕೊಳ್ಳುವುದು ಕಾದಂಬರಿಯ ಪ್ರಮುಖ ವಸ್ತು.  ಅಧ್ಯಾಪಕರಾಗಿ ಶಿಸ್ತು, ಆದರ್ಶ ರೂಢಿಸಿಕೊಂಡ ಜೀಕೆ ಮಾಸ್ತರರು ಕಾಲೇಜು ಪ್ರಿನ್ಸಿಪಾಲರಾದ ಮೇಲೆ ಅದೇ ಇಮೇಜ್ ಅನ್ನು ಕಾಯ್ದುಕೊಳ್ಳುವ ಒತ್ತಡದಲ್ಲಿ ಇರುತ್ತಾರೆ. ತಾವು ಕಟ್ಟಿಕೊಂಡ ಮುಖವಾಡದ ಆಚೆ ಬರಲಾಗದೆ, ತಮಗೆ ಸಮಾಜದಿಂದ ದತ್ತವಾದ ವ್ಯಕ್ತಿತ್ವದ ಆಚೆ ಕಾಣಲಾರದೆ, ತಮಗೂ ತಮ್ಮ ವಿದ್ಯಾರ್ಥಿಗಳಿಗೂ ನಡುವೆ ಒಂದು ದೊಡ್ಡ ಕಂದಕವನ್ನೇ ನಿರ್ಮಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಕಸಿವಿಸಿಯನ್ನು ಮುಚ್ಚುಮರೆ ಇಲ್ಲದೆ ಧಿಕ್ಕರಿಸಿ, ಸಂಸ್ಕೃತ ನಾಟಕಗಳ ಶೃಂಗಾರದ ಭಾಗಗಳನ್ನು ತಮ್ಮ ನಗಾರಿ ಧ್ವನಿಯಲ್ಲಿ ವಿವರಿಸಿ ಭಾವನೆಗಳನ್ನು ಒತ್ತಾಯದಿಂದ ನಿಗ್ರಹಿಸುತ್ತಾರೆ. ಜೀಕೆ ಅವರ ಹೆಂಡತಿ ಮಾನಸಿಕ ಅಸ್ವಾಸ್ಥ್ಯಕ್ಕೆ ತುತ್ತಾದವರು. ೧೧ ವರ್ಷದ ಅವರ ಮಗ ಕೂಡ ಅನಾರೋಗ್ಯದಿಂದ ಸಾ...
Image
 ಇಂದಿನ ಪ್ರೀತಿ, ಪ್ರೇಮ, ಪ್ರಣಯದ  ‘ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ’ ‘ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ’ ಇದು ಜಯರಾಮಾಚಾರಿಯವರ ಕಥಾ ಸಂಕಲನ. ಪ್ರೀತಿ, ಪ್ರೇಮ, ಮೋಹ, ಪ್ರಣಯ, ಬೇಲಿ ದಾಟುವ ಆತುರ, ಭಗ್ನತೆ ಇವೇ ಈ ಕಥಾ ಸಂಕಲನದ ಮೂಲ ದ್ರವ್ಯ. ಇದರಲ್ಲಿ ೧೧ ಕಥೆಗಳಿವೆ.   ತನಗೆ ತಾನೇ ಬರೆದುಕೊಂಡು ಎಂಜಾಯ್ ಮಾಡಿದ ಕಥೆಗಳು. ಇದರಲ್ಲಿನ ಕತೆಗಳೆಲ್ಲ ಹೀಗೆಯೇ ಇರಬೇಕು, ಹಾಗೆಯೇ ಇರಬೇಕೆಂಬ ಚೌಕಟ್ಟಿನವಲ್ಲ.  ತಮಗೆ ಬೇಕಾದಂತೆ ಬರೆಯಿಸಿಕೊಂಡವು. ಓದಿದಾಗ ಕಿಕ್ ಕೊಡುವಂತವು ಎಂದು ಲೇಖಕರು ಹೇಳಿಕೊಂಡಿದ್ದಾರೆ. ಪ್ರೀತಿಯಲ್ಲಿ ಬಿದ್ದವರು ಮಾಡಿಕೊಳ್ಳುವ ಎಡವಟ್ಟು, ಪ್ರೀತಿಯ ಆಳ, ಧರ್ಮ ಅಡ್ಡಬರುವುದು, ಇಬ್ಬರ ಮಧ್ಯೆ ಇನ್ನೊಬ್ಬ ಪ್ರೇಮಿ ಬರುವುದು, ಡೇಟಿಂಗ್, ಮಾಲ್‌ನಲ್ಲಿ ಪ್ರೀತಿ-ಪ್ರೇಮ, ಪ್ರೇಮಿಗಳ ಮಧ್ಯೆ ಮಾತುಕತೆ,  ಹರಿದಾಡುವ ಮೆಸೇಜುಗಳು, ಇಮೋಜಿಗಳು, ಅಶ್ಲೀಲ ಮಾತುಗಳ ಭರಾಟೆ, ವರ್ಚುಯಲ್ ಇಂಟರ್‌ಕೋರ್ಸ್ ಮೊದಲಾದವುಗಳ ಬಗ್ಗೆ ಇಲ್ಲಿ ಕಥೆಗಳಿವೆ. ಇಂದಿನ ಜಗತ್ತಿನಲ್ಲಿ ಪ್ರೇಮಿಗಳ ಪ್ರೀತಿ, ವ್ಯವಹಾರ ಹೇಗಿದೆ, ದೊಡ್ಡ ನಗರಗಳಲ್ಲಿ ನಡೆಯುವ ಲವ್, ಲವ್ ಫೇಲ್ಯೂರ್, ಅತಿಯಾಗಿ ಮುಂದುವರೆದಿರುವುದನ್ನು ಸುಂದರವಾಗಿ ಚಿತ್ರಿಸಿದ್ದಾರೆ.      ಅಂತರ್ ಧರ್ಮೀಯ ಲವರ್‌ಗಳನ್ನು ಸಹಿಸದೆ ಲವ್ ಜಿಹಾದ್ ಹೆಸರಲ್ಲಿ ಕೊಲೆ ಮಾಡುವುದು ಇಂದಿನ ದಿನಮಾನಗಳಲ್ಲಿ ಸಾಮಾನ್ಯವಾಗಿರುವುದನ್ನು ‘ಕಾರ್ನರ್ ಕಪಲ್ಸ್’ ಬಿ...
Image
    ಸಮಕಾಲೀನ ಸಂಗತಿಗಳಿಗೆ ಮರುವ್ಯಾಖ್ಯಾನವಾಗುವ ‘ನಗರ ಬಾಯಾರಿಕೆ’ ‘ನಗರ ಬಾಯಾರಿಕೆ’ ಇದು ಪತ್ರಕರ್ತ ಶ್ರೀನಿವಾಸ್ ಜೋಕಟ್ಟೆ ಅವರ ಲೇಖನಗಳ ಸಂಗ್ರಹದ ಕೃತಿ. ಮುಂಬೈಯಲ್ಲಿ ಪತ್ರಕರ್ತರಾಗಿ ಹೆಸರು ಗಳಿಸಿರುವ ಶ್ರೀನಿವಾಸ್ ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳು ಇದರಲ್ಲಿವೆ. ಸಮಕಾಲೀನ ಸಂಗತಿಗಳಿಗೆ ಮರುವ್ಯಾಖ್ಯಾನವಾಗಿರುವ ಈ ಬರಹಗಳಲ್ಲಿ ಅವರ ಸೂಕ್ಷ್ಮತೆಯ ಶೋಭೆ ಇದೆ. ಅವರ ಪಕ್ವತೆ, ಪ್ರಬುದ್ಧತೆಗೆ ಈ ವೈವಿಧ್ಯಮಯ ಕೃತಿ ಸಾಕ್ಷಿಯಾಗಿದೆ. ಮುಂಬೈಯಂತಹ  ಮಹಾನಗರದಲ್ಲಿ ಆಧುನಿಕತೆಯ ಮೇಲೆ ನಿಂತು ವಾಸ್ತವಕ್ಕೆ ನಿರ್ದಾಕ್ಷಿಣ್ಯ ಕನ್ನಡಿ ಹಿಡಿದು ತಿಳಿಮನಸ್ಸಿನಿಂದ ಬರೆದ ಲೇಖನಗಳು ಇದರಲ್ಲಿವೆ.  ಈ ಕೃತಿಯಲ್ಲಿ ಸುಮಾರು ೬೭ ಲೇಖನಗಳಿವೆ. ಅವು ಸಾಮಾಜಿಕ, ಸಾಹಿತ್ಯಿಕ, ಸಂದರ್ಶನ, ಸ್ಥಳಗಳ ಐತಿಹ್ಯ, ವ್ಯಕ್ತಿ ಚಿತ್ರಣ ಮೊದಲಾದ ರೂಪದಲ್ಲಿವೆ. ಇವುಗಳಲ್ಲಿ ಆಯ್ದ ಕೆಲವು  ಲೇಖನಗಳ ಕುರಿತಾದ ಅವಲೋಕನ ಮಾಡಲಾಗಿದೆ.  ‘ಹಿಮಾಲಯದ ಸುನಾಮಿಗೆ ತತ್ತರಿಸಿದ ‘ಪ್ರಳಯ’ ಖಂಡ  ಬರಹದಲ್ಲಿ ೨೦೧೩ರ ಜೂನ್ ತಿಂಗಳಿನಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಪ್ರಳಯ ಸಂಭವಿಸಿದ್ದನ್ನು ವಿವರಿಸಿದ್ದಾರೆ. ಇಂದಿಗೂ ಸಂತ್ರಸ್ಥರಿಗೆ ಸೂರು ಸಿಕ್ಕಿಲ್ಲ. ಮೊದಲಿನ ಸ್ಥಿತಿಯಲ್ಲಿ ಜನರಿಲ್ಲ. ಉತ್ತರಾಖಂಡ  ರಾಜ್ಯವಾದ ಮೇಲೆ ಅಲ್ಲಿ ವಿಕಾಸದ ಹೆಸರಿನಲ್ಲಿ ಪ್ರಕೃತಿಯ ಜೊತೆ ಕೀಟಲೆ ನಡೆಸುತ್ತಾ ಅರಣ್ಯ ಕಡಿಯುವುದು, ನದಿಗಳನ್ನು ವಿಭಜಿಸುವು...
Image
 ಕೃತಿಯ ಹೆಸರು- ಮನೋವೈದ್ಯರ ಡೈರಿಯಿಂದ ಲೇಖಕರು- ಡಾ|| ಕೆ ಎಸ್  ಶ್ರೀಧರ, ಶಿವಮೊಗ್ಗ ಪುಟಗಳು- ೭೪ ಬೆಲೆ- ೬೦/-  ಕರ್ನಾಟಕದ ಪ್ರಖ್ಯಾತ ಮನೋವೈದ್ಯರಲ್ಲಿ ಒಬ್ಬರಾಗಿರುವ,  ಶಿವಮೊಗ್ಗದಲ್ಲಿ ಸ್ವಂತ ಆಸ್ಪತ್ರೆ  ಹೊಂದಿರುವ ಡಾ|| ಕೆ ಆರ್ ಶ್ರೀಧರ್ ಅವರು ‘ಮನೋವೈದ್ಯರ ಡೈರಿಯಿಂದ -೨’ ಈ ಕೃತಿಯ ಮೂಲಕ ಮಾನಸಿಕ ಕಾಯಿಲೆ ಮತ್ತು ಮಾನಸಿಕ ವೈದ್ಯರ ಬಗ್ಗೆ ಇರುವ ವಿಪರೀತ ಅಜ್ಞಾನ ಮತ್ತು ತಪ್ಪು ಕಲ್ಪನೆಗಳನ್ನು, ಜೊತೆಗೆ ತಮ್ಮ ಅನುಭವದಲ್ಲಿ ವಿವಿಧ ಹಂತದ ಮಾನಸಿಕ ರೋಗಿಗಳನ್ನು ಕಂಡು, ಅವರೊಡನೆ ಮಾತನಾಡಿ, ಅವರ ಮಾನಸಿಕ ಸಮಸ್ಯೆಯನ್ನು ಪತ್ತೆ ಮಾಡಿ, ಚಿಕಿತ್ಸೆಯ ಮೂಲಕ ಗುಣಪಡಿಸಿದ ಅನುಭವಗಳನ್ನು  ವಿವರಿಸಿದ್ದಾರೆ. ವೈದ್ಯ ಸಾಹಿತ್ಯಕ್ಕೆ ಸಂಬಂಧಿಸಿ ಸುಮಾರು ೧೯ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ.   ಮಾನಸಿಕ ಕಾಯಿಲೆಯನ್ನು ವಾಸಿ ಮಾಡಲು ಸಾಧ್ಯ ಎಂಬ ಅರಿವನ್ನು ಜನರಲ್ಲಿ ಮೂಡಿಸುವುದು ಅಗತ್ಯ. ಮಾನಸಿಕ ಅಸ್ವಸ್ಥನನ್ನು ಹುಚ್ಚ  ಎಂದು ಕರೆಯಲಾಗುತ್ತದೆ. ಇದು ತಪ್ಪು. ಹುಚ್ಚುತನ ಬೇರೆ. ಜೊತೆಗೆ ಹುಚ್ಚಾಸ್ಪತ್ರೆ ಎಂಬ ಹೆಸರು ಈಗ ಇಲ್ಲ.  ಬದಲಾಗಿ ಮಾನಸಿಕ ಆರೋಗ್ಯ ಕೇಂದ್ರ ಎಂದು ಇತ್ತೀಚೆಗೆ ನಾಮಫಲಕ ಹಾಕುತ್ತಿರುವುದನ್ನು ಅವರು ವಿವರಿಸಿದ್ದಾರೆ.   ಇನ್ನೊಂದೆಡೆ, ಈ ರೋಗದ ಬಗ್ಗೆ ಇರುವ ಮೂಢನಂಬಿಕೆ ಅಥವಾ ತಿಳಿವಳಿಕೆಯ ಕೊರತೆಯನ್ನೂ ವಿವರಿಸಿದ್ದಾರೆ. ಮಾಧ್ಯಮಗಳಲ್ಲಿ ವಿಶೇ...
Image
 ಬದುಕಿನ ಜಂಜಾಟದ  ‘ಬಣಮಿ’  ‘ಬಣಮಿ’ ಇದು ಯುವ ಲೇಖಕ ಕಲಬುರಗಿಯ ಕಪಿಲ ಪಿ. ಹುಮನಾಬಾದೆ ಅವರ ಮೊದಲ ಕಥಾ ಸಂಕಲನ. ಕಥೆಗಾರನು ಕಾವ್ಯಮಯ, ಸರಳ ಭಾಷೆ, ಪ್ರ್ರಾಂತೀಯ ನುಡಿಗಟ್ಟಿನ ಭಾಷೆಯಲ್ಲಿ, ಸ್ಪಷ್ಟವಾದ ಕಥೆಗಳನ್ನು ವಿಶೇಷ ತಂತ್ರದಿಂದ ಹೆಣೆದಿದ್ದಾರೆ. ಕಥಾಸಾರ, ಪಾತ್ರಗಳ ಚಿತ್ರಣ ಮನಸೆಳೆಯುವಂತಿದೆ. ಎಲ್ಲವೂ ಬಯಲುಸೀಮೆ ಭಾಗದ ಗ್ರ್ರಾಮೀಣ ರೈತರ ಜೀವನ ಸ್ಥಿತಿಗತಿ, ಹಳ್ಳಿಯಲ್ಲಿ ನಡೆಯುವ ಪ್ರೇಮ, ಆಕರ್ಷಣೆ, ದುಶ್ಚ್ಚಟದ, ಅಂದಿನ ತುತ್ತಿಗೆ ಹೋರಾಡುವ ಶ್ರಮಜೀವಿಗಳು ಕಥೆಯಲ್ಲಿ ಬರುತ್ತಾರೆ.   ಬದುಕಿನ ಹೆಜ್ಜೆಯಲ್ಲೇ ಹುಟ್ಟಿದ ಜೀವತಂತುಗಳು ಇದರಲ್ಲಿ ಕಂಡುಬರುತ್ತವೆ.  ಕಥೆಯ ರೂಪಕಗಳು ಮೋಹಕವಾಗಿವೆ. ಕಥೆಗಳು ಒಂದಕ್ಕೊಂದು ಸಂಬಂಧಪಟ್ಟಿರುವಂತೆ ಕಂಡುಬರುತ್ತವೆ. ಬದುಕಿನ ಜಂಜಾಟವೇ ಇಲ್ಲಿನ ಕಥಾ ವಸ್ತು. ತನ್ನತನದ ಹುಡುಕಾಟದಲ್ಲಿರುವ ಜನರೇ ಇಲ್ಲಿನ ಪಾತ್ರಗಳು. ಒಟ್ಟಿನಲ್ಲಿ ಇದೊಂದು ವಿಶಿಷ್ಟ ಮಾದರಿಯ ಕಥಾಗುಚ್ಛವಾಗಿ ಕಾಣುತ್ತದೆ.   ಕೃತಿಯಲ್ಲಿ ಇಟ್ಟೂ ೧೦ ಕಥೆಗಳಿದ್ದು, ಇವು ವಿವಿಧ ಪತ್ರಿಕೆಗಳಲ್ಲಿ, ಸ್ಪರ್ಧೆಗಳಲ್ಲಿ ಬಳಸಿದವುಗಳಾಗಿವೆ.  ಕಥೆಗಳತ್ತ ಗಮನಿಸುವುದಾದರೆ-    ತುದಿ ಇಲ್ಲದ ಹಳ್ಳ  ಕಾಲೇಜಿನಲ್ಲಿ ತನ್ನ ಲವರ್ ಆಗಿದ್ದ, ಏಕಾಂತದಲ್ಲಿ ಚುಂಬಿಸಿ, ಕೈ ಹಿಡಿದು ಮುದ್ದಿಸಿದ್ದ ರಶೀದಾ ವಾರ್ಷಿಕ ಪರೀಕ್ಷೆಯನ್ನು ಬರೆಯದೆ ಊರಿಗೆ ತೆರಳುತ್ತಾಳೆ.  ಯಾಕೆ ತನಗೆ ...
Image
  ‘ಹಂಚಿಕೊಳ್ಳೋಣ ಬಾ ಗೆಳತಿ ನೆನಪುಗಳ...’ ‘ಹಂಚಿಕೊಳ್ಳೋಣ ಬಾ ಗೆಳತಿ ನೆನಪುಗಳ...’ ಇದು ಉತ್ಕಟ ಪ್ರೇಮದ ಕುರಿತ  ಕವನ ಸಂಕಲನವಾಗಿದ್ದು ವೃತ್ತಿಯಿಂದ  ವೈದ್ಯರಾಗಿ, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ|| ನಾಗನಾಥ ವಿ. ಯಾದಗಿರಿ ಇದನ್ನು ರಚಿಸಿದ್ದಾರೆ. ಕೃತಿಯಲ್ಲಿ ಏಳು ವಿಭಾಗಗಳಲ್ಲಿ ಸುಮಾರು ೪೦ಕ್ಕೂ ಹೆಚ್ಚು ಕವಿತೆಗಳಿವೆ. ತಮ್ಮ ಜೀವನ ಅನುಭವಧ ರಸಗಳಿಗೆಯನ್ನು ಪದಗಳಿಗೆ ಲೇಪಿಸಿ ಕವನವಾಗಿಸಿ ಓದುಗರಲ್ಲಿ ಅದೇ ಭಾವನೆ ಮೂಡುವಂತೆ ಮಾಡಿದ್ದಾರೆ. ಪ್ರೀತಿ, ವಿರಹ, ಆತಂಕ, ಬಳಲಿಕೆ, ಅಗಲಿಕೆ, ನೋವು, ಜೊತೆಗೆ ಬಿಡಿಸಲಾಗದ ಕೆಲವು ಸನ್ನಿವೇಶಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.  ನಿನ್ನ ವಶೀಕರಣಕ್ಕೆ ಒಳಗಾಗಿದ್ದೇನೆ/ ಕಂಗಳ ವಶವಾದೆ/ ವಶವೋ ಪರವಶವೋ/ ಅದೊಂದು ಸಂಮೋಹನ ವಿದ್ಯೆ/ ನನಗೂ ಕಲಿಸು ಕದಿಯಬೇಕಿದೆ/ ನಿನ್ನ ಹೃದಯ/ ಎಂದು ಕವನವೊಂದರಲ್ಲಿ ಹೇಳುತ್ತಾರೆ.  ಹೀಗೆ ಇಲ್ಲಿನ ಕವಿತೆಗಳೆಲ್ಲ ಪ್ರೀತಿಯ ಆಳಕ್ಕೆ ನಮ್ಮನ್ನು ಕರೆದೊಯ್ಯುತ್ತವೆ. ಉತ್ಕಟ ಪ್ರೀತಿಯ ಪ್ರೇಮಿಯನ್ನು ಕುರಿತು ಕವಿ ಬರೆದಂತಿದೆ. ಸಾಲುಗಳೂ ಸಹ ಅಷ್ಟೇ ಅರ್ಥಗರ್ಭಿತವೂ, ಶ್ರೀಮಂತ ಪದ-ಪುಂಜಗಳಿಂದಲೂ ಕೂಡಿದವಾಗಿವೆ.  ಮೊದಲ ಕವನದಲ್ಲಿ  ‘ಪ್ರೀತಿ ಏಕೆ ಭೂಮಿ ಮೇಲಿದೆ’ ಎಂದು ಪ್ರಶ್ನಿಸುತ್ತಾ  ತಾನೇ ಉತ್ತರ ಕಂಡುಕೊಳ್ಳುತ್ತಾರೆ. ಸೃಷ್ಟಿಕರ್ತನಿಗೆ ಈ ಪ್ರೀತಿ ಅದ್ಭುತವೆನಿಸಿ, ತಾನೇ ಪ್ರಯೋಗ ನಡೆಸ...
Image
 ಬಸವಣ್ಣನನ್ನು ಕಾಣುವ ಪ್ರಯತ್ನ ‘ಬಸವಣ್ಣನೊಳಗಿನ ಬಸವಣ್ಣ’ ‘ಬಸವಣ್ಣನೊಳಗಿನ ಬಸವಣ್ಣ’  ಈ ಕೃತಿಯು  ಬಸವಣ್ಣನ ಜೀವನಾಧಾರಿತ  ಕೃತಿಗಳು ಹಾಗೂ ವಚನಗಳ ತೌಲನಿಕ ವಿಶ್ಲೇಷಣೆಯಿಂದ ಕೂಡಿದೆ. ಭದ್ರಾವತಿಯ ಸರ್ ಎಂ ವಿ ಸರಕಾರಿ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ  ಡಾ. ಜಿ ಎಸ್ ಅಶೋಕ್ ಈ ಕೃತಿಯ  ಕರ್ತೃ.  ಬಸವಣ್ಣನವರನ್ನು ಅರ್ಥೈಸಿಕೊಳ್ಳುವುದೇ ಕಷ್ಟಸಾಧ್ಯವಾಗಿರುವ ಸಂದರ್ಭದಲ್ಲಿ ಅಂತರಂಗದ ಬಸವಣ್ಣನವರನ್ನು ಕಾಣುವುದು  ಮಹಾ ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ವಚನಗಳ, ಬೇರೆ ಬೇರೆ ಶರಣರ, ಸಾಹಿತಿಗಳ ಅಧ್ಯಯನದ ಮೂಲಕ ಬಸವಣ್ಣನವರನ್ನು ಕಾಣುವ ಪ್ರಯತ್ನವನ್ನು ಇಲ್ಲಿ ಲೇಖಕರು ಮಾಡಿದ್ದಾರೆ. ಬಸವಣ್ಣ ಇಂದಿಗೂ ನಮ್ಮ ಅರಿವನ್ನು ಮೀರಿದ ವಿದ್ಯಮಾನವೇ ಆಗಿದ್ದಾನೆ. ಯಾವ ಕಾಲಕ್ಕೂ ಕಲ್ಪನೆಗೂ ಸಿಗದ ಸಮಾಜ ಸುಧಾರಕನಾಗಿ, ವಿಮರ್ಶಕನಾಗಿ, ಸಾಮಾಜಿಕ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಕಾಣುವ ಅಂತರ್ಮುಖ, ತನ್ನ ಒಳ ಹೊರಗುಗಳ ವಿಮರ್ಶಕನಾಗಿ, ಮಾನವೀಯತೆಯ ಹರಿಕಾರನಾಗಿ,  ಸಮಾನತೆಯ ಸಾಕಾರಮೂರ್ತಿಯಾಗಿ,  ಕಾಯಕ ಯೋಗಿಯಾಗಿ,  ದಾಸೋಹ ತತ್ವಗಳ ಪ್ರತಿಪಾದಕನಾಗಿ ನಮಗೆ ಕಾಣುತ್ತಿದ್ದಾನೆ.  ಬಸವಣ್ಣನ ಸಾಮಾಜಿಕ ಬದುಕಿನ,  ರಾಜಕೀಯ ಜೀವನದ ಮತ್ತು ವರ್ಗ ಸಂಘರ್ಷದ ವಿಚಾರಗಳನ್ನು ವೈಚಾರಿಕ ಹಾಗೂ ವಿಶ್ಲೇಷಣೆಗೆ ಇಲ್ಲಿ ಲೇಖಕರು ಒಳಪಡಿಸಿದ್ದಾರೆ. ಬಸವಣ್ಣನ ಹುಟ್ಟು, ಜಾತಿಯ ಬಗ್ಗೆ ವಿ...
Image
  ಭಾವಜೀವಿಗಳ  ‘ಅವಳ ಹೆಜ್ಜೆ ಗುರುತು’ ‘ಅವಳ ಹೆಜ್ಜೆ ಗುರುತು’ ಇದು ಭರವಸೆಯ ಬರಹಗಾರ್ತಿ ಮೂಲತಃ. ಸಾಗರದವರಾದ ಸೌಮ್ಯಾ ಕಾಶಿ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ  ಹೆಣ್ಣಿನ ಪಾತ್ರವೇ ಅಧಿಕವಿದೆ.   ಕೃತಿಯ ಹೆಸರಿನಲ್ಲೂ ಹೆಣ್ಣೇ ಇದೆ.  ಬದುಕಿನ ದಾರಿಯಲ್ಲಿ ಜೊತೆಯಲ್ಲಿರುವ, ಜೊತೆಯಾಗುವ,  ಕೆಲವೊಂದಷ್ಟು ದೂರ ಜೊತೆಯಾಗಿ ನಂತರ ಮರೆಯಾಗುವ, ಹೆಣ್ಣು, ತಾಯಿ, ಅಕ್ಕ, ತಂಗಿಯಾಗಿಯೋ, ಗೆಳತಿಯಾಗಿಯೋ, ಹೆಂಡತಿಯಾಗಿಯೋ ಪಾತ್ರ ವಹಿಸುತ್ತಾಳೆ.  ಆ ದಾರಿಯಲ್ಲಿನ ‘ಅವಳ ಹೆಜ್ಜೆಯ ಗುರುತು’ ನ್ನು ಇಲ್ಲಿ ತೋರಿಸಿದ್ದಾರೆ.   ಇಲ್ಲಿರುವ ಪಾತ್ರಗಳು ಬಹುತೇಕವಾಗಿ ಎಲ್ಲರಿಗೂ ಗೊತ್ತಿರುವಂತಹುದೇ. ಸಹಜ ಪಾತ್ರಗಳ ಮೂಲಕ ಚೆಂದದ ಕಥೆಯನ್ನು ಹೆಣೆದಿದ್ದಾರೆ. ಆದ್ದರಿಂದ ಇವು ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಬರವಣಿಗೆಯ ಶೈಲಿಯೂ ಚೆಂದವಾಗಿದೆ. ಹವ್ಯಕ ಕನ್ನಡವು ಹೆಚ್ಚಾಗಿ ಬಳಕೆಯಾಗಿದೆ. ಇದು ಕಥೆಯ ತೂಕ, ಶೈಲಿಗೆ ಮೆರುಗು ತಂದಿದೆ. ಇಲ್ಲಿನ ಪಾತ್ರಗಳೆಲ್ಲಾ ನಮ್ಮ ಮನಸ್ಸಿನಲ್ಲಿ  ಸದಾ ಉಳಿಯುವಂತಹವು.  ಕೃತಿಯ ಕುರಿತು:  ಅಮ್ಮನ ಹಾಗೆ ಕಂಡವಳು  ಈ ಕಥೆಯಲ್ಲಿ ಹಳ್ಳಿ ಜನರ ಮೌಢ್ಯ, ಆಧುನಿಕತೆಗೆ ತೆರೆದುಕೊಳ್ಳದೇ ಇರುವುದು, ತಮ್ಮದೇ ಹಠ, ಮುಟ್ಟಿನ ಬಗ್ಗೆ ಇರುವ ವಿಚಾರದ ಕೊರತೆ, ಇನ್ನೊಬ್ಬರು ಸಲಹೆ ಕೊಟ್ಟರೂ ಅದನ್ನು ಒಪ್ಪದಿರುವುದು,  ಚಾಡಿ ಹೇಳುವುದು, ನೈಜ ಕಾರಣ ...
Image
 ನವಿರುಭಾವ ಸೂಸುವ ಜೀವ ಜಲ  ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯದ ಪ್ರಕಾರ ತುಂಬಾ ಕಡಿಮೆ. ಕಡಿಮೆ ಸಾಲುಗಳಲ್ಲಿ ಅತಿ ಮುಖ್ಯವಾದ ಅರ್ಥವನ್ನು ಹೊಂದಿರುವಂತಹ ಸಾಹಿತ್ಯ ಚಿಕ್ಕದರಲ್ಲಿ ಚೊಕ್ಕತನವನ್ನು ಅಳವಡಿಸಿಕೊಂಡು ವಿಶಾಲವಾದ ಅರ್ಥವನ್ನು ಪ್ರತಿಪಾದಿಸುವಂಥದ್ದು  ಚುಟುಕು. ಉಡುಪಿ ಜಿಲ್ಲೆಯ  ಪದವಿಪೂರ್ವ ಕಾಲೇಜೊಂದರಲ್ಲಿ  ಉಪನ್ಯಾಸಕಿಯಾಗಿರುವ  ಶುಭಲಕ್ಷ್ಮೀ ನಾಯಕ್ ‘ಜೀವ ಜಲ’ ಕೃತಿಯ ಮೂಲಕ ಸುಮಾರು ೩೪೦ ರಷ್ಟು ಚುಟುಕುಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.  ಪ್ರಕೃತಿ, ಪರಿಸರ, ಜೀವನ ಪ್ರೀತಿ, ರಾಜಕೀಯ, ಧಾರ್ಮಿಕ, ಸಾಮಾಜಿಕ ವಿಚಾರಗಳನ್ನು ಚೊಕ್ಕದಾದ ಚುಟುಕುಗಳಲ್ಲಿ ಸಮಾಜಕ್ಕೆ ನೀಡುವ ಕೆಲಸ ಮಾಡಿದ್ದಾರೆ. ಇಲ್ಲಿನ ಬಹುತೇಕ  ಚುಟುಕುಗಳಲ್ಲಿ ಅವರ ನಿಸರ್ಗದ ಪ್ರೇಮ, ಕಾಳಜಿ ಮತ್ತು ಅಚ್ಚರಿ  ಕಂಡುಬರುತ್ತದೆ. ಇಂದು ಗಂಭೀರ ಚಿಂತನೆಗೆ ಒಳಪಡಿಸುವ ವಿಷಯಗಳೂ ಇವಾಗಿವೆ. ಚಿಕ್ಕದಾದರೂ ಅದರೊಳಗಿನ ಗಾಂಭೀರ್ಯತೆ, ಬದುಕು ಕಟ್ಟಿಕೊಡುವ ಘನತೆ, ಲೋಕಾನುಭವ, ಜೊತೆಗೆ ಸ್ವ ಅನುಭವ sವೂ ಮಿಳಿತವಾಗಿ ಬಹುಪಕ್ವತೆ ಚುಟುಕುಗಳನ್ನು ನಾವು ಕಾಣಬಹುದಾಗಿದೆ.  ಕೃತಿಯಲ್ಲಿನ ಕೆಲವು ಚುಟುಕುಗಳನ್ನು ಗಮನಿಸುವುದಾದರೆ, ಅಮ್ಮನನ್ನು ಅವಳ ಗುಣ, ವ್ಯಕ್ತಿತ್ವ, ಆಕೆ ಅನುಭವಿಸುವ ನೋವು ಎಲ್ಲವನ್ನೂ ಕೇವಲ ನಾಲ್ಕು ಸಾಲಿನಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.  ಕರುಣೆಯ ಕಡಲು  ಮ...
Image
 ಸವಾಲೊಡ್ಡುವ, ಸೂಕ್ಷ್ಮತೆಯ  ‘ಸಿಗದವರು’  ‘ಸಿಗದವರು’ ಇದು ರಾಘವೇಂದ್ರ ರಾವ್ ಅವರ ಕಥಾ ಸಂಕಕಲನ. ಅನು ಬೆಳ್ಳೆ ಎಂಬ ಕಾವ್ಯನಾಮದಿಂದ ಹೆಸರಾಗಿರುವ ಲೇಖಕರು, ಈ ಕೃತಿಯಲ್ಲಿ ಮನುಷ್ಯ ಸಂಬಂಧದ ಸಂಕೀರ್ಣ ಮಜಲುಗಳನ್ನು, ಭಾವನಾತ್ಮಕ ತಾಕಲಾಟಗಳನ್ನು, ಬದುಕಿನ ಹೋರಾಟದ ಮತ್ತು ಸಂಘರ್ಷವನ್ನು ಚಿತ್ರಿಸಿದ್ದಾರೆ. ಕೃತಿಯಲ್ಲಿ ಒಟ್ಟೂ ೯ ಕಥೆಗಳಿವೆ. ಇಲ್ಲಿನ ಬಹುತೇಕ ಕಥೆಗಳಲ್ಲಿ  ಅಪೂರ್ಣತೆ ಇರುವುದನ್ನು ಕಾಣಬಹುದು. ಕಥೆಯ ಎಳೆಯನ್ನು ಇಟ್ಟುಕೊಂಡು ನಾವೇ ಅದರ ಅಂತ್ಯ ಗಮನಿಸಬೇಕಿದೆ.   ಇಲ್ಲಿನ ಕಥೆಗಳಲ್ಲಿ ನೊಂದ ಪಾತ್ರಗಳಿವೆ. ಒಳಗೊಂದು, ಹೊರಗೊಂದು ನಡೆವಳಿಕೆಯವರಿದ್ದಾರೆ. ವೈವಾಹಿಕ ಬದುಕಿನಾಚೆಯ ಸಂಬಂಧವಿದೆ. ಸ್ವೇಚ್ಛೆಯ ಜೀವನವಿದೆ. ಮನುಷ್ಯ ಸಂಬಂಧದ ತವಕ-ತಲ್ಲಣಗಳಿವೆ.  ಎಲ್ಲ ಕಥೆಗಳು ಕೌತುಕವಾಗಿದ್ದರೂ ಅಂತ್ಯಗಳೇಕೋ ಅಸ್ಪಷ್ಟತೆಯನ್ನು ನೀಡುವ ಮೂಲಕ ನಮಗೆ ಒಂದು ಬಗೆಯ ಸವಾಲನ್ನು ಒಡ್ಡುತ್ತವೆ. ಪ್ರಯೋಗಶೀಲತೆಯ ಇಲ್ಲಿನ ಕಥೆಗಳು ಆಪ್ತವಾಗುತ್ತವೆ,  ನಮ್ಮನ್ನು ಓದಿಸಿಕೊಂಡು ಹೋಗುತ್ತವೆ.  ಅಬಾಧಿತ  ಶಾಮಣ್ಣ ಮತ್ತು ಸತ್ಯನಾರಾಯಣ ಒಂದೇ ರೀತಿಯ ವ್ಯಕ್ತಿಗಳು. ಇಬ್ಬರೂ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೀರಾ ಆಸಕ್ತಿಯುಳ್ಳವರು. ಇದ್ದಕ್ಕಿದ್ದಂತೆ ಶಾಮಣ್ಣ ಸಾವಿಗೀಡಾಗುತ್ತಾನೆ. ಪತ್ನಿ ಕಾವೇರಿ ತಾನೇ ಅಂತ್ಯಕ್ರಿಯೆ ಮಾಡುವುದಾಗಿ ಹಠ ಹಿಡಿದಾಗ ಪುರೋಹಿತರು ಇದನ್ನು ಒಪ್ಪುವುದಿಲ್ಲ. ಜೊತೆಗೆ...