ಯುವಪೀಳಿಗೆಗೆ ಒಂದು ಕೈದೀವಿಗೆ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಇದು ರಾಷ್ಟ್ರಕವಿ ಕುವೆಂಪು ಅವರ ವಿಚಾರೋಪನ್ಯಾಸದ ಕೃತಿ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ಮೂಲಕ ವಿಶ್ವಮಾನವತೆಯ ಸಂದೇಶವನ್ನು ಸಾರಿದ ಕನ್ನಡದ ಮೊದಲ ಜ್ಞಾನಪೀಠ ಪುರಸ್ಕೃತ ಕವಿ ಕುಪ್ಪಳ್ಳಿ ಪುಟ್ಟಪ್ಪನವರು ಯುವಕರನ್ನು ಕುರಿತು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆನೀಡುತ್ತಾರೆ. ಈ ಕರೆಯ ಹಿಂದಿರುವ ಉದ್ದೇಶ ಸ್ಪಷ್ಟ, ಅದೇನೆಂದರೆ ಯುವಕರು ದೇಶದ ಆಸ್ತಿ, ಅವರು ಮನಸು ಮಾಡಿದರೆ ಅಸಾಧ್ಯ ಎಂಬುದೇ ಇಲ್ಲ. ಹಾಗಾಗಿ ಮೊದಲು ಈ ಸಮಾಜದ, ನಾಡಿನ ಯುವಕರು ವೈಜ್ಞಾನಿಕ ಮನೋಧೋರಣೆಯುಳ್ಳವರಾಗಿ ಎಚ್ಚೆತ್ತುಕೊಳ್ಳಬೇಕು ಎಂಬುದು ಕುವೆಂಪು ಅವರ ಸದಾಶಯ, ಆದ್ದರಿಂದಲೇ ಅವರು ಯುವಕರನ್ನು ಕುರಿತು ಅವರ ಮತಿಯನ್ನು ಎಚ್ಚರಿಸುವ ಮಾತುಗಳನ್ನಾಡಿದ್ದಾರೆ. ಈ ಕೃತಿಯಲ್ಲಿ ನಾಲ್ಕು ಲೇಖನಗಳಿವೆ. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ “ಯುವಕರು ‘ನಿರಂಕುಶಮತಿ’ಗಳಾಗಬೇಕು, ‘ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ ‘ನಿರಂಕುಶ ಮತಿ”’. ಇಲ್ಲಿ ಕುವೆಂಪು ನಿರಂಕುಶಮತಿ ಎಂಬ ಪದವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ಮತಿ ಮಾನವನ ಸರ್ವೋತ್...