‘ಹದ್ದುಗಳು’ ‘ಹದ್ದುಗಳು’ ಕಥಾ ಸಂಕಲನ ಇಂದಿನ ದಕ್ಷಿಣ ಕನ್ನಡದ ಗ್ರಾಮೀಣ ಬದುಕಿನ ಸೊಗಸನ್ನು ಚೆಂದವಾಗಿ ನಮಗೆ ನೀಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ಕೌಟುಂಬಿಕ ಜೀವನ, ನಡೆವಳಿಕೆಗಳು, ಜೀವಪರ ಚಿಂತನೆಗಳು, ಕಾರಣಿಕ ಸ್ಥಳದ ಶ್ರದ್ಧೆ, ಹಿರಿಯರ ಅತಂತ್ರ ಮನಃಸ್ಥಿತಿ, ಹೆಣ್ಣಿನ ನೋವು- ನಲಿವು, ಆತ್ಮಹತ್ಯೆ, ಕೊಲೆ ಮುಂತಾದ ಆಗುಹೋಗುಗಳನ್ನು ಇಲ್ಲಿನ ಕಥೆಗಳು ಮೈತುಂಬಿಕೊಂಡಿವೆ ಎದುರ್ಕಳ ಸುಬ್ಬಣ್ಣ ಭಟ್ ಇದರ ಲೇಖಕರು. ಕುಶಾಲಿನ ಮಾತು, ಪ್ರೀತಿ -ಪ್ರೇಮದ ನಲ್ನುಡಿ, ವ್ಯಂಗ್ಯದ ಚಾಟಿ ಕತೆಯಲ್ಲಿ ಕಂಡುಬರುತ್ತದೆ. ಮುಖ ತಿರುಗಿಸಿದವರು ಗೆದ್ದು ಬರುವ ಸನ್ನಿವೇಶ, ನಂಬಿಕೆಗೆ ದ್ರೋಹ ಬಗೆದು ಮನದಲ್ಲಿ ಕೊರಗುವವರು, ಪಾಪಪ್ರಜ್ಞೆಯಲ್ಲಿ ನರಳುವವರು, ಬಲಿಪಶುವಾಗುವುದು, ಸಾವಿನಲ್ಲಿ ಅಂತ್ಯ ಕಾಣುವುದು... ಈ ಕೃತಿಯಲ್ಲಿ ಕಂಡುಬರುತ್ತದೆ. ಕಾಡುವ ದುಃಖ ವಿಷಾದವೂ ಇದೆ. ಬದುಕಿನಲ್ಲಿ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು ಎಂಬ ಮಾತಿದೆ. ಅದನ್ನು ತೋರಿಸುವ ಪ್ರಯತ್ನವನ್ನು ಇಲ್ಲಿನ ಕೆಲವು ಕಥೆಗಳು ಮಾಡಿವೆ. ಈ ಕಥೆಗಳಲ್ಲಿ ಈಗಿನ ಯಾಂತ್ರಿಕ ಜೀವನ, ಮೊಬೈಲ್, ಕಂಪ್ಯೂಟರ್ ಸಂಸ್ಕೃತಿ, ಆಧುನಿಕ ಯುವ ಜನಾಂಗದ ಮನೋಭಾವ, ಮುಗ್ಧ ಜನರ ಜೀವನ, ಸಮಾಜದ ಸಣ್ಣ ಸಣ್ಣ ಸಂಗತಿಗಳನ್ನು ನಿರೂಪಿಸಿದ್ದಾರೆ. ಕಥೆಗಳು ಸರಳವಾಗಿದ್ದು, ಕಷ್ಟವಿಲ್ಲದೆ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಶೈಲಿ ತಂತ್ರಕ್ಕೆ ಮಹತ್ವ ಕೊಡದೆ ಸರಳವಾಗಿ ಕಥೆ ಹ...