ಕೌಟುಂಬಿಕ ಮೌಲ್ಯ ಸಾರುವ ‘ಮನೆಯೇ ಮಂತ್ರಾಲಯ’ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ಅವಕಾಶವಂಚಿತ ಪ್ರತಿಭೆಗಳಿಗೆ ಏರ್ಪಡಿಸಿದ್ದ ‘ವಾಣಿ ಕೌಟುಂಬಿಕ ಕಥಾ ಸ್ಪರ್ಧೆ- ೨೦೨೪’ರಲ್ಲಿ ಸ್ಪರ್ಧೆಗೆ ಬಂದ ಆಯ್ದ ಕಥೆಗಳ ಸಂಕಲನ ‘ಮನೆಯೇ ಮಂತ್ರಾಲಯ’. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತು ಕಥೆಗಳಿವೆ. ಶೈಲಜಾ ಸುರೇಶ ಈ ಕೃತಿಯನ್ನು ಸಂಪಾದಿಸಿದವರು. ಈ ಕಥಾ ಸ್ಪರ್ಧೆಗೆ ‘ಮನೆಯೇ ಮಂತ್ರಾಲಯ’ ಎನ್ನುವ ಶೀರ್ಷಿಕೆಯನ್ನು ಕೊಡುವ ಮೂಲಕ ಕೌಟುಂಬಿಕ ಕಥೆಗಳನ್ನು ಆಹ್ವಾನಿಸಲಾಗಿತ್ತು. ದಾಂಪತ್ಯದ ಮೌಲ್ಯ, ಕೌಟುಂಬಿಕ ಮೌಲ್ಯ, ತಂದೆ-ತಾಯಿಯ ಮೇಲಿನ ಗೌರವ, ಮಕ್ಕಳನ್ನು ಸಲುಹುವ ರೀತಿ, ಮಕ್ಕಳಿಗೆ ಶಿಕ್ಷಣ, ಮಕ್ಕಳ ಮದುವೆ.... ಮುಂತಾದವುಗ ಬಗ್ಗೆ ಸದಭಿರುಚಿಯ ಕಥೆಗಳು ಇದರಲ್ಲಿವೆ. ಇಲ್ಲಿನ ಕಥೆಗಳು ಕೌಟುಂಬಿಕದ ಸುಗಂಧವನ್ನು ಪಸರಿಸುವಂತಿವೆ. ನಿಜವಾದ ರಸಾನಂದವನ್ನು ಕೊಡುವಂತಿವೆ. ಓದುಗರು ಮೆಚ್ಚುವಂತಹ ಅಪೂರ್ವ ಮೌಲ್ಯವನ್ನು ಹೊಂದಿರುವಂತಹ ಕಥೆಗಳು ಇವು. ಉದ್ಧರಣ ರಾಧಿಕಾ ವಿ. ಗುಜ್ಜರ್, ಬೆಂಗಳೂರು ಅವರು ಬರೆದ, ಮೊದಲ ಬಹುಮಾನ ಪಡೆದ ಕಥೆ ಇದು. ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮಂಕಾಗಿದ್ದ ಗೆಳತಿ ಲತಾಳನ್ನು ಆಕೆಯ ತಂದೆ- ತಾಯಿ ಮನೆಯಲ್ಲಿ ನಾಯಿ ತರ ಕೂಡಿಹಾಕಿರುತ್ತಾರೆ. ಇವರ ಮನೆಯ ಹತ್ತಿರವೇ ನಾಗು ಎನ್ನುವವರು ಇಸ್ತ್ರಿ ಅಂಗಡಿಯನ್ನು ಇಟ್ಟಿರುತ್ತಾರೆ. ನಾಗು ಮತ್ತು ಲತಾ ಶಾಲೆಯಲ್ಲಿ ಒಟ್ಟಿಗೆ ...